ಬಿನ್ನಾಣಿಯ ಶ್ರೀ ಶಾಂತಿನಾಥ ಸ್ವಾಮಿ ಬಸದಿ, ವೇಣೂರು == ಸ್ಥಳ == ಈ ಬಸದಿಯು ವೇಣೂರು ಶ್ರೀ ಬಾಹುಬಲಿ ಸ್ವಾಮಿಯ ಎದುರಿಗಿರುವ ಪ್ರಾಂಗಣದ ತುದಿಯ ಬಲಭಾಗದಲ್ಲಿ ಪಶ್ಚಿಮಕ್ಕೆ ಮುಖ ಮಾಡಿದೆ. ಬೆಳ್ತಂಗಡಿ ತಾಲೂಕು ಕೇಂದ್ರದಿಂದ 12 ಕೀಲೋಮೀಟರ್ ದೂರದಲ್ಲಿ ಗರ್ಡಾಡಿ ಗ್ರಾಮದಲ್ಲಿ ಗುರುವಾಯನಕೆರೆ ವೇಣೂರು ಮಾರ್ಗದ ಬದಿಗೆ ಹಿಂದೆ ಗುಂಡದ ಬಸದಿಯೆಂದು ಪ್ರಸಿದ್ದವಾದ ಭಗವಾನ್ ಶ್ರೀ ಶಾಂತಿನಾಥ ಸ್ವಾಮೀಯ ಬಸದಿಯ ನೀವೇಶನ ಇದೆ. == ಇತಿಹಾಸ == ಈ ಬಸದಿಯನ್ನು ವೀರ ತಿಮ್ಮರಾಜ ಒಡೆಯರ ರಾಣಿ ಬಿನ್ನಣಿ ಅರಸು ಮನೆತನದ ಪಾರ್ಶ್ವದೇವಿ ನಿರ್ಮಿಸಿದ್ದರು. ಅನಂತರ ಶ್ರೀ ದೇವರ ಅಮೃತಪಡಿ ಹಾಗೂ ಇತರ ವಿನಿಯೋಗಗಳಿಗಾಗಿ ಕೇಲವು ಭೂಮಿಯನ್ನು ಉಂಬಳಿ ಬಿಟ್ಟಿದ್ದರು.ಇದರ ಅನುಸಾರ ಯಿನ್ನೂರಾಳವೆಟ್ಟದ ಕುಕಿಪೊಳಿ ಎಂಬಲ್ಲಿ ಪಡುವಣ ದಿಕ್ಕಿನಲ್ಲಿದ್ದ ತಿಮರುಕಜಿಲ ಗದ್ದೆ ಬೆಟ್ಟುಗದ್ದೆ, ಪೆಂಜಲು ಮಾಗಣೆ, ರಾಜಿ ಬೈಲಿನ ನಾಲ್ಕು ಮುಡಿಗದ್ದೆ, ಇತ್ಯಾದಿ ಕೆಲವು ಕಡೆಯ ಗದ್ದೆಗಳನ್ನು ಈ ಉದ್ದೇಶಕ್ಕೆ ಬಿಡಲಾಗಿತ್ತು. ಈ ಬಸದಿಯನ್ನು ರಾಣಿಯು ಶಾಲಿವಾಹನ ಶಕ 1526ನೇ (ಕಿ.ಶ.1604) ಶೋಭ ಕೃತು ಸಂವತ್ಸರದ ಮೀನ ಮಾಸದ ಎರಡನೆಯ ಆದಿತ್ಯವಾರ ನಿರ್ಮಿಸಿದ್ದಳು. ನಿರ್ಮಾಣ ಕಾಲದಲ್ಲಿ ಇದನ್ನು ಕೂಡಾ ಪೂರ್ಣ ಶಿಲಾಮಯವಾಗಿ ನಿರ್ಮಿಸಿರಬೇಕೆಂದು ಇದರ ಹೊರಗಿನ ಲಕ್ಷಣ ಹಾಗೂ ಇಂದು ಊಳಿದು ಕೊಂಡಿರುವ ಒಳಗಿನ ಶಿಲಾಫಲಕದ ಮಾಡಿನಿಂದ ಸುಲಭವಾಗಿ ತಿಳಿದುಕೊಳ್ಳಬಹುದು. == ವಿನ್ಯಾಸ == ಈ ಬಸದಿಯು ಚಿಕ್ಕದಾಗಿದ್ದು, ಗರ್ಭಗೃಹವನ್ನು ಹೊಂದಿದೆ, ಒಳಗಿನ ರಚನೆಯನ್ನು ಸೂಕ್ಷ್ಮವಾಗಿ ನೋಡಿದರೆ ಘಂಟಾಮಂಟಪ, ಪ್ರಾರ್ಥನಾ ಮಂಟಪ, ತೀರ್ಥಂಕರ ಮಂಟಪ ಹಾಗೂ ಗಂಧಕುಟಿ ಮತ್ತು ಗರ್ಭ ಗೃಹ ಇರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಗರ್ಭಗೃಹದಲ್ಲಿ ಗಂಧಕುಟಿಯ ಮಧ್ಯ ಸುಮಾರು ಎರುಡೂವರೆ ಅಡಿ ಎತ್ತರದ ಲೋಹದ ಖಡ್ಗಾಸನ ಭಂಗಿಯಲ್ಲಿರುವ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿಯ ಬಿಂಬವು ವಿರಾಜಮಾನವಾಗಿದೆ. ಶ್ರೀ ಪಾಶ್ರ್ವನಾಥ ಸ್ವಾಮಿಯ ಇನ್ನೆರಡು ಸುಂದರ ಜಿನಬಿಂಬಗಳು ಇಲ್ಲಿದೆ. ಹರಿವಾಣಗಳನ್ನು ಇಡಲಾಗಿದೆ. ಈ ಬಸದಿಯ ಜಗಲಿಗೂ ಅಮೃತ ಶಿಲೆಗಳನ್ನು ಹಾಸಿ ಚಂದಗೊಳಿಸಲಾಗಿದೆ. == ಉಲ್ಲೇಖಗಳು ==